ಶಿರಸಿ: ರಾಜ್ಯ ಸರ್ಕಾರದ ನಿರ್ಧಾರಗಳಿಂದಾಗಿ ಗ್ರಾಮ ಪಂಚಾಯಿತಿಗೆ ಅನುದಾನ ಸಿಗದೇ ಅಭಿವೃದ್ಧಿ ಕುಂಠಿತಗೊಂಡಿದೆ. ತಕ್ಷಣವೇ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿ ನೆಗ್ಗು ಗ್ರಾಮ ಪಂಚಾಯಿತಿ ಸದಸ್ಯರು ಸೋಮವಾರ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸದಸ್ಯ ಚಂದ್ರಕಾಂತ ಹೆಗಡೆ ನೇರ್ಲದ್ದ, ಕಳೆದ ಎರಡು ವರ್ಷದಲ್ಲಿ ರಾಜ್ಯ ಸರ್ಕಾರ ಹಗರಣಗಳ ಸರಮಾಲೆಯನ್ನೇ ಸೃಷ್ಠಿಸಿದೆ. ಬಡವರ ಬಗ್ಗೆ ಯಾವ ಕಾಳಜಿ ತೋರದೇ, ಅವರೇ ಘೋಷಿಸಿದ ಯೋಜನೆಗಳೂ ಬಡವರಿಗೆ ತಲುಪದಂತಾಗಿದೆ. ಈ ಹಿಂದೆ ನೀಡಿದ ಮನೆಗಳಿಗೆ ಇಂದಿಗೂ ಹಣ ಮಂಜೂರಾಗದೇ ಮನೆ ನಿರ್ಮಿಸಿಕೊಂಡವರು ಸಾಲಕ್ಕೆ ಸಿಲುಕಿದ್ದಾರೆ. ನಮ್ಮ ಶಾಸಕ ಭೀಮಣ್ಣ ನಾಯ್ಕ ಎಲ್ಲೆಡೆ ಸಾರ್ವಜನಿಕರ ಮೇಲೆ ಗರಂ ಆಗುತ್ತಿರುವುದೊಂದೇ ಅವರ ಸಾಧನೆಯಾಗಿದೆ. ಕೇಂದ್ರ ಸರ್ಕಾರ ವಿವಿಧ ಯೋಜನೆಯಲ್ಲಿ ಹಣ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಜನಸಾಮಾನ್ಯರಿಗೆ ತಲುಪಿಸಲು ತೊಡಕಾಗುತ್ತಿದೆ ಎಂದರು.
ಸದಸ್ಯ ವಿಶ್ವನಾಥ ಹೆಗಡೆ ಹಾರೂಗಾರ ಮಾತನಾಡಿ, ಗ್ರಾಮೀಣ ರಸ್ತೆಗಳು ಇಂದು ರಿಪೇರಿ ಕಾಣದೇ ದುಸ್ತಿತಿಗೆ ಬಂದಿದೆ. ರಾಜ್ಯ ಸರ್ಕಾರ ಬಡವರಿಗೆ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿದೆ. ಆದರೆ, ಸಾಮಾನ್ಯ ಕಾರ್ಯಗಳನ್ನೇ ಮರೆತಿದೆ. ರಾಜ್ಯ ಸರ್ಕಾರದ ವಿರುದ್ಧ ನಾವು ರಾಜ್ಯಪಾಲರಿಗೆ ದೂರು ಸಲ್ಲಿಸುವ ಸ್ಥಿತಿ ಬಂದಿದೆ ಎಂದರು.
ಬಿಜೆಪಿ ಜಿಲ್ಲಾ ಸಂಚಾಲಕ, ಹಾಲು ಪ್ರಕೋಷ್ಠದ ಸದಸ್ಯ ನರಸಿಂಹ ಭಟ್ ಬಾವಿಕೈ ಮಾತನಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ಅಭಿವೃದ್ಧಿ ಕಾರ್ಯ ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ಸಚಿವರೇ ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಮೂಲಭೂತ ಸೌಲಭ್ಯಗಳನ್ನೂ ಒದಗಿಸಲಾಗದ ಸ್ಥಿತಿಗೆ ರಾಜ್ಯ ಸರ್ಕಾರ ಬಂದು ತಲುಪಿದೆ. ಹಾಲು ಉತ್ಪಾದಕರಿಗೂ ಸರ್ಕಾರದಿಂದ ನೀಡಬೇಕಾದ ಸಹಾಯಧನ ಸಮರ್ಪಕವಾಗಿ ಸಿಗದಂತಾಗಿದೆ ಎಂದು ಆಪಾದಿಸಿದರು.
ಪ್ರಮುಖರಾದ ಎಚ್.ವಿ. ಗಣೇಶ, ಮಹಾಲಕ್ಷ್ಮಿ ಗೌಡ, ಸರಸ್ವತೀ ಹೆಗಡೆ, ಗಣಪತಿ ಭಟ್ ಹೆಬ್ಬಲಸು, ಉಮೇಶ ನೇರ್ಲವಳ್ಳಿ, ರವಿ ಹೊಸ್ಮನೆ, ಮಂಜುಳಾ ಪಾವಸ್ಕರ, ರಾಘವೇಂದ್ರ ಪಟ್ಟಿಗುಂಡಿ, ಕೃಷ್ಣಮೂರ್ತಿ ನಾಡಗುಳಿ, ಗಣಪತಿ ನೇರ್ಲದ್ದ, ನರಹರಿ ಹಲಸಿಗೆ, ಗೌತಮ ಕೊಪ್ಪೇಸರ, ವಿನಾಯಕ ತಟಗುಣಿ, ಸಿಂಧೂರ ಅಮ್ಮಚ್ಚಿ,ನಾರಾಯಣ ಹಲಸಿಗೆ ಇತರರಿದ್ದರು.